ಬೆಂಗಳೂರು: ಹೋಟೆಲ್ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ವಿಷಯ ಜನರಿಗೆ ತಲುಪಿಸಲು ಅಥವಾ ಹೋಟೆಲೋದ್ಯಮದ ಪರವಾಗಿ ಸರ್ಕಾರವನ್ನು ತಲುಪಲು ನಾವು ನಿಮಗೆ ಸಂಪೂರ್ಣ ಸಹಾಯ ಮಾಡುತ್ತೇವೆ ಎಂಬುದಾಗಿ ʼಕನ್ನಡಪ್ರಭ-ಸುವರ್ಣನ್ಯೂಸ್ʼ ಪ್ರಧಾನ ಸಂಪಾದಕ ರವಿ ಹೆಗಡೆ ಭರವಸೆ ನೀಡಿದರು.
ಬೃಹತ್ ಬೆಂಗಳೂರು ಹೋಟೆಲುಗಳ ಸಂಘ(ಬಿಬಿಎಚ್ಎ)ದ ನೂತನ ಕಾರ್ಯಕಾರಿ ಸಮಿತಿ ಇತ್ತೀಚೆಗೆ ಆಯ್ಕೆ ಆಗಿದ್ದು, ನೂತನ ಪದಾಧಿಕಾರಿಗಳನ್ನು ಬಿಬಿಎಚ್ಎಗೆ ಸ್ವಾಗತಿಸುವ ಸಲುವಾಗಿ ʼಮಯೂರ ಸಮೂಹʼದ ಗೋಪಾಡಿ ಶ್ರೀನಿವಾಸ ರಾವ್ ಅವರು ಜುಲೈ 18ರ ಗುರುವಾರ ಬೆಂಗಳೂರಿನ ಜಯನಗರ ಈಶಾನ್ಯ ಪಾರ್ಟಿ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.
ಹೋಟೆಲ್ ಕ್ಷೇತ್ರವನ್ನು ದೊಡ್ಡ ಉದ್ಯಮವಾಗಿ ನೋಡುವಲ್ಲಿ/ಮಾಡುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿರುತ್ತದೆ. ಆ ನಿಟ್ಟಿನಲ್ಲಿ ನಮ್ಮ ʼಕನ್ನಡಪ್ರಭ ಮತ್ತು ಸುವರ್ಣನ್ಯೂಸ್ʼ ನಿಮಗೆ ಸದಾ ನೂರಕ್ಕೆ ನೂರು ಬೆಂಬಲವಾಗಿ ನಿಲ್ಲಲಿದೆ. ಹೋಟೆಲೋದ್ಯಮಕ್ಕೆ ಮಾಧ್ಯಮದ ಸಹಾಯ ಬೇಕು ಅನಿಸಿದಾಗ ನೀವು ನನಗೆ ಕರೆ ಮಾಡಬಹುದು ಎಂದು ಅವರು ಭರವಸೆ ನೀಡಿದರು.

ಹೋಟೆಲ್ ವಿಷಯವನ್ನು ಜನರಿಗೆ ತಲುಪಿಸಲು ಅಥವಾ ಹೋಟೆಲ್ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಸ್ಪಂದನೆಗಾಗಿ ಆಂದೋಲನದ ರೀತಿಯಲ್ಲಿ ಮುನ್ನಡೆಯಲು ಅಥವಾ ಸರ್ಕಾರದ ಯಾವುದೇ ಸಚಿವರನ್ನು ನಿಯೋಗ ರೂಪದಲ್ಲಿ ಭೇಟಿಯಾಗಲು ಕೂಡ ನಾವು ನಿಮಗೆ ಸಹಕರಿಸುತ್ತೇವೆ ಎಂದು ಹೋಟೆಲೋದ್ಯಮಿಗಳಲ್ಲಿ ರವಿ ಹೆಗಡೆ ವಿಶ್ವಾಸ ತುಂಬಿದರು.

ಹೋಟೆಲ್ ಉದ್ಯಮದಲ್ಲಿನ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದ ಅವರು, ಸ್ವಿಗ್ಗಿ-ಜೊಮ್ಯಾಟೊದಂಥ ಅಗ್ರಿಗೇಟರ್ಗಳೊಂದಿಗಿನ ವ್ಯವಹಾರದಲ್ಲಿ ನಿಯಮ-ಷರತ್ತುಗಳು ನಿಮ್ಮವೇ ಆಗಿರಲಿ ಎಂಬ ಕಿವಿಮಾತನ್ನೂ ಹೇಳಿದರು.
ಹೋಟೆಲೋದ್ಯಮಕ್ಕೆ ಸಕಲ ಸಹಕಾರದ ಭರವಸೆ ನೀಡಿದ ಕನ್ನಡಪ್ರಭ-ಸುವರ್ಣನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ@AsianetNewsSN @RaviHegde @kprabhanews @bbhotelsassn #HotelKannada pic.twitter.com/KRESTBeJQW
— ಹೋಟೆಲ್ ಕನ್ನಡ / Hotel Kannada (@HotelKannada) July 18, 2024
ಮಯೂರ ಸಮೂಹದ ಸಂಸ್ಥಾಪಕ ಗೋಪಾಡಿ ಶ್ರೀನಿವಾಸ ರಾವ್, ಬಿಬಿಎಚ್ಎ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಉಪಾಧ್ಯಕ್ಷರಾದ ಶಂಕರ್ ಕುಂದರ್, ಶಕೀರ್ ಹಖ್, ಕಾರ್ಯದರ್ಶಿ ವೀರೇಂದ್ರ ಕಾಮತ್, ಖಜಾಂಚಿ ಸುಧಾಕರ್ ಶೆಟ್ಟಿ, ಜಂಟಿ ಕಾರ್ಯದರ್ಶಿಗಳಾದ ಬಿ.ಎಂ. ಧನಂಜಯ, ರಾಕೇಶ್ ಅಳ್ಸೆ, ಕೃಷ್ಣರಾಜ್, ಶೇಖರ್ ನಾಯ್ಡು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೂ ಓದಿ: ಹೋಟೆಲ್ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ
ಇದೂ ಓದಿ: ಅರಮನೆ ಮೈದಾನದಲ್ಲೇ ಕುಂದಾಪ್ರ ಕನ್ನಡ ಹಬ್ಬ; ಆಯೋಜನೆ ಸಾಧ್ಯವಾಗಿದ್ದು ಹೇಗೆ?
ಇದೂ ಓದಿ: ಬೃಹತ್ ಬೆಂಗಳೂರು ಹೋಟೆಲುಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ