ಒಳಗೇನಿದೆ!?

ಕಲಬೆರಕೆ ಪನೀರ್‌ ಕುರಿತು ವ್ಯಾಪಕ ದೂರು; ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸಚಿವ ಜೋಶಿ ಪತ್ರ

ನವದೆಹಲಿ: ದೇಶಾದ್ಯಂತದ ಮಾರುಕಟ್ಟೆಯಲ್ಲಿ ನಕಲಿ ಮತ್ತು ಕಲಬೆರಕೆ ಪನೀರ್‌ ಮಾರಾಟ ಆಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆಯುವ ಮೂಲಕ ಕೇಂದ್ರ ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.

ದೇಶಾದ್ಯಂತ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟ ಮತ್ತು ಬಳಕೆ ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ(ಎನ್‌ಸಿಎಚ್‌)ಗೆ ವ್ಯಾಪಕ ದೂರುಗಳು ಬರುತ್ತಿವೆ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೆ, ಈ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಿ ಎಂದು ಅವರು ಒತ್ತಾಯಿಸಿದ್ದಾರೆ.

ದೇಶಾದ್ಯಂತ ಫಾಸ್ಟ್ ಫುಡ್ ಕೇಂದ್ರಗಳು, ರೆಸ್ಟೋರೆಂಟ್‌ಗಳು ಮತ್ತಿತರರಿಗೆ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟ ಮಾಡಲಾಗುತ್ತಿದೆ. ವಿಶೇಷವಾಗಿ ಪನೀರ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಆಗಿರುವುದರಿಂದ ಇದನ್ನು ಗಮನಿಸಿರುವ ಸಾರ್ವಜನಿಕರನೇಕರು ಗ್ರಾಹಕ ಸಹಾಯವಾಣಿ ಮೂಲಕ ವ್ಯಾಪಕವಾಗಿ ದೂರು ಸಲ್ಲಿಸಿ ಗಮನ ಸೆಳೆದಿದ್ದಾರೆ.

ಕಲಬೆರಕೆ ಪನೀರ್‌ ಸೇವನೆ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಗ್ರಾಹಕರು ನೀಡಿದ ದೂರಿನಲ್ಲಿ ತೀವ್ರ ಕಳವಳ ಸಹ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಆಹಾರ ಗುಣಮಟ್ಟ ಮತ್ತು ಸುರಕ್ಷತೆಗಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ದುಗುಡವನ್ನು ತಮ್ಮ ಗಮನಕ್ಕೆ ತರಬಯಸಿದ್ದೇನೆ ಎಂದು ಸಚಿವ ಜೋಶಿ ಅವರು ಕೇಂದ್ರ ಆರೋಗ್ಯ ಸಚಿವರ ಗಮನ ಸೆಳೆದಿದ್ದಾರೆ.

ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಪೋರ್ಟಲ್‌ನಲ್ಲಿ ಹಲವಾರು ದೂರುಗಳನ್ನು ದಾಖಲಿಸಿದ್ದಾರೆ. ಇದು ದೇಶಾದ್ಯಂತ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟ ಮತ್ತು ಬಳಕೆ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸುತ್ತದೆ. ಅಂತಹ ನಕಲಿ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಸೇವನೆ ಜನರ ತೀವ್ರ ಮತ್ತು ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣ ಆಗಬಹುದು. ಹಾಗಾಗಿ ಇದರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಪನೀರ್‌ ಉತ್ಪಾದನಾ ಸಂಸ್ಥೆಗಳು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006ರ ಪ್ರಕಾರ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಡಬೇಕು ಎಂದೂ ನಡ್ಡಾ ಅವರಲ್ಲಿ ಸಚಿವ ಜೋಶಿ ಅವರು ಮನವಿ ಮಾಡಿದ್ದಾರೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಕಬಾಬ್‌-ಮಂಚೂರಿಯನ್‌ ಬಳಿಕ ಚಹಾ ಪುಡಿಯದ್ದೂ ಬಣ್ಣ ಬಯಲು

ಇದೂ ಓದಿ: ‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್‌ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ