ಒಳಗೇನಿದೆ!?

ಬೆಂಗಳೂರು ಹೋಟೆಲುಗಳ ಸಂಘದಿಂದ ಸಿಎಂ ಸಿದ್ದರಾಮಯ್ಯಗೆ ಮನವಿ; ಏನಿದು ಬೇಡಿಕೆ?

ಹೋಟೆಲ್‌ ಕನ್ನಡ, ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿನ ಸಮರ ಸಂಘರ್ಷದ ಹಿನ್ನೆಲೆಯಲ್ಲಿ ಉಂಟಾಗಿರುವ ಇಂಧನ ಬಿಕ್ಕಟ್ಟಿನ ಪರಿಣಾಮವಾಗಿ ಎಲ್‌ಪಿಜಿ ಕೊರತೆ ಎದುರಿಸುತ್ತಿರುವ ಹೋಟೆಲೋದ್ಯಮಿಗಳು ಇದೀಗ ಮತ್ತೊಂದು ಕಾರಣಕ್ಕಾಗಿ ಸರ್ಕಾರದ ಮೊರೆ ಹೋಗಿದ್ದಾರೆ.

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ ಹೋಟೆಲ್ ಉದ್ಯಮಕ್ಕೆ ವಿದ್ಯುತ್ ಬಿಲ್‌ನಲ್ಲಿ ರಿಯಾಯಿತಿ ನೀಡುವಂತೆ ‘ಬೆಂಗಳೂರು ಹೋಟೆಲುಗಳ ಸಂಘ'(ಬಿಎಚ್‌ಎ) ರಾಜ್ಯ ಸರ್ಕಾರವನ್ನು ಕೋರಿದೆ. ಈ ಕುರಿತು ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾರ್ಚ್‌ 14ರ ಶನಿವಾರ ಮನವಿ ಪತ್ರ ಸಲ್ಲಿಸಿದೆ.

ಹೋಟೆಲ್ ಉದ್ಯಮವು ಅಗತ್ಯ ಸೇವೆಯಡಿ ಬರುತ್ತದೆ. ಪ್ರಸ್ತುತ ಗ್ಯಾಸ್ ಪೂರೈಕೆಯಲ್ಲಿ ತೊಂದರೆ ಆಗಿದ್ದರೂ ಗ್ರಾಹಕರ ಹಿತದೃಷ್ಟಿಯಿಂದ ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಗ್ಯಾಸ್ ಕೊರತೆಯಿಂದಾಗಿ ಅನಿವಾರ್ಯವಾಗಿ ಅನೇಕ ಹೋಟೆಲ್‌ಗಳು ‘ಇಂಡಕ್ಷನ್ ಸ್ಟೌವ್’ (ವಿದ್ಯುತ್ ಒಲೆ) ಬಳಸಿ ಆಹಾರ ತಯಾರಿಸುತ್ತಿವೆ. ಇದರಿಂದಾಗಿ ಹೋಟೆಲ್‌ಗಳ ವಿದ್ಯುತ್ ಬಿಲ್ ಮತ್ತು ಒಟ್ಟಾರೆ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಸದ್ಯದ ಈ ಆರ್ಥಿಕ ಹೊರೆ ಹಿನ್ನೆಲೆಯಲ್ಲಿ ಗ್ಯಾಸ್ ಪೂರೈಕೆ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವವರೆಗೆ ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ನೀಡಿರುವಂತೆ ಕರ್ನಾಟಕದಲ್ಲೂ ವಿದ್ಯುತ್ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ ಕನಿಷ್ಠ 2 ರೂಪಾಯಿಗಳಷ್ಟು ರಿಯಾಯಿತಿ ನೀಡಬೇಕು ಎಂದು ಸಂಘ ಮನವಿ ಮಾಡಿಕೊಂಡಿದೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಮುಖ್ಯಮಂತ್ರಿಯವರು ದಯವಿಟ್ಟು ಈ ಮನವಿಯನ್ನು ಪರಿಗಣಿಸಿ ಹೋಟೆಲ್ ಉದ್ಯಮಕ್ಕೆ ಸಹಕರಿಸಬೇಕು ಎಂದು ಸಂಘದ ಗೌರವಾಧ್ಯಕ್ಷರಾದ ಪಿ.ಸಿ. ರಾವ್, ಅಧ್ಯಕ್ಷರಾದ ಎಚ್.ಎಸ್‌.‌ ಸುಬ್ರಹ್ಮಣ್ಯ ಹೊಳ್ಳ ಹಾಗೂ ಗೌರವ ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್ ಅವರು ಪತ್ರದ ಮೂಲಕ ಕೋರಿದ್ದಾರೆ. ಈ ಪತ್ರದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ರವಾನಿಸಲಾಗಿದೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಎಫ್​ಎಸ್​ಎಸ್​ಎಐ ಪ್ರಮಾಣಪತ್ರಗಳಿಗಿನ್ನು ನವೀಕರಣ ಅನಗತ್ಯ; ಒಮ್ಮೆ ಪಡೆದರೆ ಜೀವಿತಾವಧಿ ಮಾನ್ಯತೆ

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ